ಹೆಣ್ಣು ಮನಸ್ಸು ಮಾಡಿದ್ರೆ ಏನು ಬೇಕಾದ್ರೂ ಮಾಡುತ್ತಾಳೆ ಅನ್ನೋ ಮಾತನ್ನ ಎಷ್ಟೋ ಮಂದಿ ಹೆಣ್ಣು ಮಕ್ಕಳು, ಮಹಿಳೆಯರು ಸಾಧಿಸಿ ತೋರಿಸಿದ್ದಾರೆ. ಅಂತದ್ದೇ ಒಂದು ಸ್ಟೋರಿ ಬಗ್ಗೆ ಇಂದು ನಾವು ಹೇಳಲು ಹೊರಟಿದ್ದೇವೆ. ಕೆಲವರು ಜೀವನದಲ್ಲಿ ಆಗುವ ಸಣ್ಣಪುಟ್ಟ ಏರಿಳಿತಗಳಿಗೆ ಹೆದರಿ ಬಿಡುತ್ತಾರೆ. ಆದರೆ, ಕೆಲವರು ಪ್ರತಿ ಕೆಟ್ಟ ಪರಿಸ್ಥಿತಿಯಲ್ಲೂ ಹೋರಾಡುವ ಮೂಲಕ ಜಯಿಸುತ್ತಾರೆ.
ಮಧ್ಯಪ್ರದೇಶದ ಬಡ ಬುಡಕಟ್ಟು ಕುಟುಂಬದಲ್ಲಿ ಜನಿಸಿದ ಸವಿತಾ ಪ್ರಧಾನ್ ಇಂದಿನ ಯುಪಿಎಸ್ ಸಿ ಪರೀಕ್ಷಾ ಸಾಧಕರ ಸರಣಿಯ ಅತಿಥಿ. ಅವರ ಹೋರಾಟದ ಬದುಕಿನ ಬಗ್ಗೆ ಇಂದಿನ ಲೇಖನದಲ್ಲಿ ತಿಳಿಯೋಣ ಬನ್ನಿ…. ಮಾಡೆಲ್ನಂತೆ ಕಾಣುವ ಸವಿತಾ ಅವರ ಬದುಕೇ ಒಂದು ಹೋರಾಟ. ಎರಡು ಮಕ್ಕಳ ತಾಯಿಯಾಗಿರುವ ಸವಿತಾ ಪ್ರಧಾನ್ ಅವರಿಗೆ ಐಎಎಸ್ ಅಧಿಕಾರಿಯಾಗುವುದು ಅಷ್ಟು ಸುಲಭವಾಗಿರಲಿಲ್ಲ. ಅವರ ಜೀವನದಲ್ಲಿ ಹಲವು ಏರಿಳಿತಗಳಿದ್ದವು. ವಿದ್ಯಾಭ್ಯಾಸದಿಂದ ಹಿಡಿದು ದಾಂಪತ್ಯ ಜೀವನದವರೆಗೆ ಸಾಕಷ್ಟು ಕಷ್ಟಪಡಬೇಕಾಯಿತು.
ಸವಿತಾ ಪ್ರಧಾನ್ ಅವರು ವಿಡಿಯೋ ಸಂದರ್ಶನದಲ್ಲಿ ತಮ್ಮ ಜೀವನದ ಹಲವು ಪ್ರಮುಖ ಘಟನೆಗಳ ಬಗ್ಗೆ ಮಾತನಾಡಿದ್ದಾರೆ. ಅವರು ಪ್ರಸ್ತುತ ಗ್ವಾಲಿಯರ್ ವಿಭಾಗದಲ್ಲಿ ಜಂಟಿ ನಿರ್ದೇಶಕರಾಗಿದ್ದಾರೆ. 2021 ರಲ್ಲಿ, ಅವರು ಖಾಂಡ್ವಾ ಮುನ್ಸಿಪಲ್ ಕಾರ್ಪೊರೇಶನ್ ನ ಮೊದಲ ಮಹಿಳಾ ಆಯುಕ್ತರಾದರು. ಸವಿತಾ ಪ್ರಧಾನ್ ಅವರು ಸಂಸದೀಯ ಮಂಡಿ ಎಂಬ ಹಳ್ಳಿಯಲ್ಲಿ ಬುಡಕಟ್ಟು ಕುಟುಂಬದಲ್ಲಿ ಜನಿಸಿದರು. ಅತ್ಯಂತ ಬಡತನದಲ್ಲಿ ಬೆಳೆದವರು.
ತನ್ನ ಹೆತ್ತವರಿಗೆ ಮೂರನೇ ಮಗು. ಆಗ ಅವರ ಗ್ರಾಮದಲ್ಲಿ 10ನೇ ತರಗತಿವರೆಗೆ ಮಾತ್ರ ಶಾಲೆ ಇತ್ತು. ಹೆಚ್ಚಿನ ಹುಡುಗಿಯರನ್ನು ಓದಲು ಕಳುಹಿಸುತ್ತಿರಲಿಲ್ಲ. ತನ್ನ ಹಳ್ಳಿಯಿಂದ 10ನೇ ಬೋರ್ಡ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಮೊದಲ ಹುಡುಗಿ ಸವಿತಾ. ಸೆಕೆಂಡ್ ಪಿಯು ಅಲ್ಲಿ ಜೀವಶಾಸ್ತ್ರ ಅಧ್ಯಯನ ಮಾಡಿದರು. ಅದಕ್ಕೇ ಸವಿತಾ ಅವರನ್ನು ಮದುವೆ ಆಗಲು ದೊಡ್ಡಮನೆಯ ಸಂಬಂಧ ಬಂದಿತ್ತು.
16-17 ನೇ ವಯಸ್ಸಿನಲ್ಲಿ ಸವಿತಾ ಅವರ ಇಚ್ಛೆಗೆ ವಿರುದ್ಧವಾಗಿ ಮದುವೆ ಆಯಿತು. ಸವಿತಾ ಪ್ರಧಾನ್ ಅವರ ವೈವಾಹಿಕ ಜೀವನ ಕಷ್ಟಗಳಿಂದ ಕೂಡಿತ್ತು. ಅತ್ತೆ ಆಕೆಯನ್ನು ಸಾಕಷ್ಟು ಹಿಂಸಿಸುತ್ತಿದ್ದರು. ಆಕೆಯ ಮೇಲೆ ಹಲವು ನಿರ್ಬಂಧಗಳನ್ನು ಹೇರಲಾಗಿತ್ತು. ಎಲ್ಲರೊಂದಿಗೆ ಕುಳಿತು ಊಟ ಮಾಡುವ ಹಕ್ಕೂ ಇರಲಿಲ್ಲ. ಯಾರ ಬಳಿಯೂ ಮಾತನಾಡುವಂತೆಯೂ ಇರಲಿಲ್ಲ. ಊಟವನ್ನೂ ಸರಿಯಾಗಿ ಕೊಡುತ್ತಿರಲಿಲ್ಲ.
ಆಗ ಕದ್ದ ರೊಟ್ಟಿಗಳನ್ನು ಒಳ ಉಡುಪಿನಲ್ಲಿ ಬಚ್ಚಿಟ್ಟುಕೊಂಡು ಯಾರೂ ಇಲ್ಲದಾಗ ತಿನ್ನುತ್ತಿದ್ದರಂತೆ. ಗರ್ಭಿಣಿಯಾದ ನಂತರವೂ ಆಕೆಯ ಮೇಲಿನ ದೌರ್ಜನ್ಯ ಕಡಿಮೆಯಾಗಲಿಲ್ಲ. ಎರಡನೇ ಮಗ ಹುಟ್ಟಿದ ನಂತರವೂ ಪತಿ ಆಕೆಗೆ ಥಳಿಸುತ್ತಲೇ ಇದ್ದರಂತೆ. ಇದರಿಂದ ಬೇಸತ್ತ ಸವಿತಾ ಒಮ್ಮೆ ನೇಣಿಗೆ ಕುಣಿಕೆ ಸಿದ್ಧಪಡಿಸಿದ್ದರು. ನೋಡುತ್ತಿದ್ದರೂ ಅತ್ತೆ ಬಂದು ತಡೆಯಲಿಲ್ಲ. ಆಗ ತಾನು ಸಾಯುವ ಅಗತ್ಯವಿಲ್ಲ ಎಂಬ ನಿರ್ಧಾರಕ್ಕೆ ಸವಿತಾ ಬಂದರು.
ಮಕ್ಕಳೊಂದಿಗೆ ಅತ್ತೆಯ ಮನೆಯನ್ನು ತೊರೆದ ಸವಿತಾ ಪಾರ್ಲರ್ ನಲ್ಲಿ ಕೆಲಸ ಮಾಡುವುದರ ಜೊತೆಗೆ ಮತ್ತೆ ಓದಲು ಪ್ರಾರಂಭಿಸಿದರು. ಇಂದೋರ್ ವಿಶ್ವವಿದ್ಯಾನಿಲಯದಿಂದ ಸಾರ್ವಜನಿಕ ಆಡಳಿತದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಮೊದಲ ಪ್ರಯತ್ನದಲ್ಲೇ UPSC ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಸರ್ಕಾರಿ ಕೆಲಸಕ್ಕೆ ಸೇರಿದ ನಂತರ ಸವಿತಾ ತನ್ನ ಪತಿ ಮತ್ತು ಅತ್ತೆಯ ವಿರುದ್ಧ ಕೌಟುಂಬಿಕ ದೌರ್ಜನ್ಯದ ಪ್ರಕರಣವನ್ನು ದಾಖಲಿಸಿದ್ದರು. ಇಂದು ಅನ್ಯಾಯಕ್ಕೊಳಗಾದ ಅನೇಕರಿಗೆ ಸವಿತಾ ದಾರಿದೀಪವಾಗಿ ಬದುಕುತ್ತಿದ್ದಾರೆ.