ಮಹಿಳೆಯರನ್ನು ಆರ್ಥಿಕವಾಗಿ ಸಬಲವನ್ನಾಗಿಸುವ ಉದ್ದೇಶ ಹೊಂದಿರುವ ಈ ಯೋಜನೆಗೆ ವಯಸ್ಸಿನ ನಿರ್ಬಂಧ ಇಲ್ಲ. ಎರಡು ವರ್ಷದ ಅವಧಿಗೆ ಮಹಿಳೆಯರು ಠೇವಣಿ ಇಡುವುದಕ್ಕೆ ಅವಕಾಶವಿದ್ದು, ಕನಿಷ್ಠ 1 ಸಾವಿರ ರೂ. ಗಳಿಂದ 2 ಲಕ್ಷ ರೂ.ಗಳವರೆಗೆ ಠೇವಣಿ ಇಟ್ಟರೆ ಶೇ. 7.5ರ ಬಡ್ಡಿಯೊಂದಿಗೆ 2 ವರ್ಷದ ನಂತರ ಹಣ ಹಿಂದಿರುಗಿಸುವ ಯೋಜನೆ ಇದು.
ಬಾಗಲಕೋಟೆ : ಉಳಿತಾಯವೂ ಒಂದು ಆದಾಯ ಎಂಬ ತತ್ವದಂತೆ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ `ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ’ ಯೋಜನೆಗೆ (Mahila Samman Saving Certificate-MSSC) ಕೋಟೆ ನಾಡು ಬಾಗಲಕೋಟೆಯಲ್ಲಿ ವ್ಯಾಪಕ ಸ್ಪಂದನೆ ದೊರಕುತ್ತಿದೆ. ಈ ಯೋಜನೆ ಲಾಭ ಪಡೆದುಕೊಳ್ಳಲು ಅನುಷ್ಠಾನ ಇಲಾಖೆಯಾಗಿರುವ ಅಂಚೆ ಇಲಾಖೆಗೆ ಮಹಿಳೆಯರು ತಂಡೋಪತಂಡವಾಗಿ ಭೇಟಿ ನೀಡಿ ಈ ಯೋಜನೆ ಲಾಭ ಪಡೆದುಕೊಳ್ಳಲು ಮುಂದಾಗಿದ್ದಾರೆ.
ಆರ್ಥಿಕ ಸ್ವಾವಲಂಬಿ ಜೊತೆಗೆ ಸುರಕ್ಷಿತ ಲಾಭವನ್ನು ಒದಗಿಸುವ ಈ ಯೋಜನೆಯನ್ನು 2023 ರ ಕೇಂದ್ರ ಆ್ಯಯವ್ಯಯದಲ್ಲಿ ಘೋಷಣೆ ಮಾಡಲಾಗಿತ್ತು. ಈಗ ಈ ಯೋಜನೆಗೆ ಮಹಿಳೆಯರಿಂದ ಉತ್ತಮ ಪ್ರತಿಕ್ರಿಯೆ ದೊರಕುತ್ತಿರುವುದನ್ನು ನೋಡಿ ಬಾಗಲಕೋಟೆ ಅಂಚೆ ಇಲಾಖೆ ಈ ಯೋಜನೆಯನ್ನು ಇನ್ನಷ್ಟೂ ಜನರಿಗೆ ಹತ್ತಿರವಾಗಿಸಲು ಅಭಿಯಾನವನ್ನೇ ಆರಂಭಿಸಲು ಮುಂದಾಗಿದೆ. ಕಳೆದ ಒಂದೇ ತಿಂಗಳ ಅವಧಿಯಲ್ಲಿ 300 ಮಹಿಳೆಯರು ಖಾತೆ ತೆರೆದು ನಗದು ಠೇವಣಿ ಇರಿಸಿದ್ದಾರೆ.
ಈ ಯೋಜನೆಗೆ ಕಳೆದ ಮೇ ತಿಂಗಳಿನಿಂದ ಅಧಿಕ ಪ್ರಮಾಣದಲ್ಲಿ ಸ್ಪಂದನೆ ವ್ಯಕ್ತವಾಗುತ್ತಿದೆ, ಪ್ರತಿ ತಾಲೂಕಿನಲ್ಲಿ ಒಂದು ಹಳ್ಳಿಯನ್ನು ಈ ಯೋಜನೆಗಾಗಿ ಆಯ್ಕೆ ಮಾಡಿಕೊಂಡು ಅಂಥ ಹಳ್ಳಿಯಲ್ಲಿ ಕನಿಷ್ಠ 100 ಖಾತೆಯನ್ನು ತೆರೆಯಲು ಮೇಳ ನಡೆಸಲು ಅಂಚೆ ಇಲಾಖೆ ತೀರ್ಮಾನಿಸಿದೆ.
ಏನಿದು ಯೋಜನೆ?
ಮಹಿಳೆಯರನ್ನು ಆರ್ಥಿಕವಾಗಿ ಸಬಲವನ್ನಾಗಿಸುವ ಉದ್ದೇಶ ಹೊಂದಿರುವ ಈ ಯೋಜನೆಗೆ ವಯಸ್ಸಿನ ನಿರ್ಬಂಧ ಇಲ್ಲದಿರುವುದು ವಿಶೇಷ. ಈ ಯೋಜನೆಯಡಿಯಲ್ಲಿ ಎರಡು ವರ್ಷದ ಅವಧಿಗೆ ಮಹಿಳೆಯರು ಠೇವಣಿ ಇಡುವುದಕ್ಕೆ ಅವಕಾಶವಿದ್ದು, ಕನಿಷ್ಠ 1 ಸಾವಿರ ರೂ. ಗಳಿಂದ 2 ಲಕ್ಷ ರೂ.ಗಳವರೆಗೆ ಠೇವಣಿ ಇಟ್ಟರೆ ಶೇ. 7.5ರ ಆಕರ್ಷಕ ಬಡ್ಡಿಯೊಂದಿಗೆ 2 ವರ್ಷದ ನಂತರ ಹಣವನ್ನು ಹಿಂದಿರುಗಿಸುವ ಯೋಜನೆ ಇದಾಗಿದೆ.
ಚಿಕ್ಕಮಕ್ಕಳಿಂದ ಹಿಡಿದು ಎಲ್ಲ ವಯೋಮಾನದ ಹೆಣ್ಣುಮಕ್ಕಳಿಗಾಗಿ ಈ ಯೋಜನೆಯನ್ನು ರೂಪಿಸಲಾಗಿದ್ದು, 2025ರ ಮಾ.31ರಂದು ಯೋಜನೆ ಮುಕ್ತಾಯಗೊಳ್ಳಲಿದೆ. ಒಬ್ಬ ಮಹಿಳೆ ಹೆಸರಿನಲ್ಲಿ ಒಂದು ಠೇವಣಿ ಇಡಲು ಅವಕಾಶವಿದ್ದು, ಮತ್ತೊಮ್ಮೆ ಠೇವಣಿ ಇಡಬೇಕಾದರೆ ಮೂರು ತಿಂಗಳು ಬಿಟ್ಟು ಇಡಬಹುದಾಗಿದೆ ಎಂದು ಅಧಿಕಾರಿಗಳು ವಿವರಿಸಿದರು.
ಒಂದು ಬಾರಿ ಹಣ ಹಿಂಪಡೆಯುವ ಅವಕಾಶ
ಖಾತೆದಾರರು ಖಾತೆಯನ್ನು ತೆರೆದ ದಿನಾಂಕದಿಂದ ಒಂದು ವರ್ಷದ ಬಳಿಕ ಅಗತ್ಯವಿದ್ದರೆ ಬ್ಯಾಲೆನ್ಸ್ನ ಗರಿಷ್ಠ ಶೇ.40 ರಷ್ಟು ಹಣವನ್ನು ಒಂದು ಬಾರಿ ಹಿಂಪಡೆಯುವ ಅವಕಾಶವೂ ಯೋಜನೆಯಡಿಯಲ್ಲಿ ಅಡಕವಾಗಿದೆ.
ಅದೇ ತೆರನಾಗಿ ವೈದ್ಯಕೀಯ ನೆರವಿಗಾಗಿ ಈ ಖಾತೆಯನ್ನು ಅಕಾಲಿಕವಾಗಿ ಮುಚ್ಚುವ ಅವಕಾಶವೂ ಇದ್ದು, ಹೀಗೆ ಅಕಾಲಿಕವಾಗಿ ಖಾತೆಯನ್ನು ಮುಚ್ಚಿದರೆ ಅಸಲಿನ ಮೇಲಿನ ಬಡ್ಡಿಯನ್ನು ಈ ಯೋಜನೆಗೆ ಅನ್ವಯಿಕ ದರದಲ್ಲಿಯೇ ಪಾವತಿಯಾಗಲಿದೆ.
ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಈ ಯೋಜನೆ ಪೂರಕ, ಹೀಗಾಗಿ ಒಂದು ಅಭಿಯಾನ ರೂಪದಲ್ಲಿ ಈ ಯೋಜನೆ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಕರಪತ್ರಗಳಲ್ಲಿ ಈ ಯೋಜನೆಯ ಸಮಗ್ರವಾದ ವಿವರ ನೀಡಿ ಕರಪತ್ರಗಳನ್ನು ವಿತರಿಸಲಾಗುತ್ತಿದೆ ಎಂದು ಬಾಗಲಕೋಟೆ ಅಂಚೆ ಅಧೀಕ್ಷಕ ಎಚ್.ಬಿ. ಹಸಬಿ ವಿವರಿಸಿದರು.
ಅಂಚೆ ಮೇಲೆ ನಂಬಿಕೆ
ಮಾರುಕಟ್ಟೆಯಲ್ಲಿ ಇಂದು ಸಾಕಷ್ಟು ಆರ್ಥಿಕ ಸಂಸ್ಥೆಗಳು ಹುಟ್ಟಿಕೊಂಡಿವೆ, ಆಕರ್ಷಕ ಬಡ್ಡಿ ದರ ನೀಡುವುದಾಗಿ ಹೇಳುತ್ತವೆ, ಆದರೆ ಅವುಗಳ ಮೇಲೆ ಯಾವ ರೀತಿ ವಿಶ್ವಾಸವೂ ಇಲ್ಲ, ಹೀಗಾಗಿ ಅಂಚೆ ಇಲಾಖೆಯ ಮೇಲೆ ನಂಬಿಕೆ ಇದೆ, ನಮ್ಮ ಹಣವೂ ಸುರಕ್ಷಿತವಾಗಿರುತ್ತದೆ, ಉಳಿತಾಯಕ್ಕೆ ಪೂರಕವಾಗಿ ಬಡ್ಡಿ ಹಣವೂ ಸಿಗುತ್ತದೆ, ವಿಶ್ವಾಸಾರ್ಹತೆಯೂ ಮುಖ್ಯ ಎಂದು ಮಹಿಳಾ ಸಮ್ಮಾನ್ ಯೋಜನೆಯಡಿಯಲ್ಲಿ ಠೇವಣಿ ಇರಿಸಿದ ಮಹಿಳೆಯರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
*