ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ (Rupesh Rajanna) ಕೋಪ ಮಾಡಿಕೊಳ್ಳುವುದು, ಕಿತ್ತಾಡಿಕೊಳ್ಳುವುದು, ಜೋರು ಧ್ವನಿಯಲ್ಲಿ ಮಾತನಾಡುವುದು ಹೊಸದೇನೂ ಅಲ್ಲ. ಬಿಗ್ ಬಾಸ್ ಮನೆಯಲ್ಲಿರುವ ಹಲವಾರು ಜನರ ಜೊತೆ ಅವರು ಹೀಗೆ ಕೋಪ ಮಾಡಿಕೊಂಡಿದ್ದಾರೆ. ಜಗಳವನ್ನೂ ಆಡಿದ್ದಾರೆ. ಆದರೆ, ಪ್ರಶಾಂತ್ ಸಂಬರ್ಗಿ ವಿಷಯದಲ್ಲಿ ಅವರು ಪದೇ ಪದೇ ರೊಚ್ಚಿಗೇಳುತ್ತಲೇ ಇರುತ್ತಾರೆ.
ಇವತ್ತು ಕೂಡ ಬಿಗ್ ಬಾಸ್ ಮನೆಯಲ್ಲಿ ಜೋರಾಗಿಯೇ ಗಲಾಟೆ ಆಗಿದ್ದು, ರೂಪೇಶ್ ರಾಜಣ್ಣ ತಮ್ಮ ಬ್ಯಾಗ್ ತಗೆದುಕೊಂಡು ದೊಡ್ಮನೆಯಿಂದ ಹೊರ ಹೋಗುವುದಾಗಿ ಅಬ್ಬರಿಸಿದ್ದಾರೆ. ಬ್ಯಾಗ್ ಎತ್ತಿಕೊಂಡು ಮನೆಯಿಂದ ತಮ್ಮನ್ನು ಕಳುಹಿಸುವಂತೆ ಮನೆಯ ಮುಖ್ಯ ಬಾಗಿಲಿನವರೆಗೂ ಬಂದಿದ್ದಾರೆ. ಅವರು ಇಂಥದ್ದೊಂದು ನಿರ್ಧಾರ ತಗೆದುಕೊಳ್ಳುವುದಕ್ಕೆ ಕಾರಣವಾಗಿದ್ದು ಕ್ಯಾಪ್ಟನ್ಸಿ ಟಾಸ್ಕ್.
ಇದೀಗ ಬಿಗ್ ಬಾಸ್ (Bigg Boss Season 9) ಮನೆಯ ಕ್ಯಾಪ್ಟನ್ ಆಗಿ ಅನುಪಮಾ ಗೌಡ ಆಯ್ಕೆಯಾಗಿದ್ದಾರೆ. ಅವರ ಮುಂದಾಳತ್ವದಲ್ಲಿ ಕ್ಯಾಪ್ಟನ್ಸಿ ಆಯ್ಕೆಯ ಟೆಸ್ಟ್ ನಡೆದಿತ್ತು. ಗಾರ್ಡನ್ ಏರಿಯಾದಲ್ಲಿ ಬಜರ್ ಒಂದನ್ನು ಇಟ್ಟಿದ್ದು, ಮೊದಲು ಈ ಬಜರ್ ಯಾರು ಒತ್ತುತ್ತಾರೋ, ಅವರು ಕ್ಯಾಪ್ಟನ್ಸಿ ಟಾಸ್ಕ್ ಗೆ ಆಯ್ಕೆ ಆಗಲಿದ್ದಾರೆ ಎನ್ನುವುದು ನಿಯಮವಾಗಿತ್ತು. ಅದರಂತೆ ರೂಪೇಶ್ ರಾಜಣ್ಣ ಮತ್ತು ಪ್ರಶಾಂತ್ ಸಂಬರ್ಗಿ ಓಡುತ್ತಾ ಬಂದು ಇಬ್ಬರೂ ಒಂದೇ ವೇಳೆಗೆ ಬಜರ್ ಮುಟ್ಟಿದರು. ಅದರಂತೆ ಯಾರು ಮೊದಲು ಮುಟ್ಟಿದ್ದು ಎಂಬ ಗೊಂದಲ ಎದುರಾಯಿತು.
ಮೊದಲು ಬಜರ್ ಮುಟ್ಟಿದ್ದು ನಾನೇ ಎಂದು ಸಂಬರ್ಗಿ (Prashant Sambargi) ಕೈ ಎತ್ತಿದರೆ, ನಾನು ಮುಟ್ಟಿದ್ದು ಎಂದು ರೂಪೇಶ್ ರಾಜಣ್ಣ ಹೇಳಿದರೆ. ಸಂಬರ್ಗಿಯೇ ಮೊದಲು ಮುಟ್ಟಿದ್ದು ಎಂದು ಅನುಪಮಾ ಗೌಡ (Anupama Gowda) ಹೇಳಿದ್ದು ಜಗಳಕ್ಕೆ ಕಾರಣವಾಯಿತು. ಸಂಬರ್ಗಿಯ ಬೆನ್ನಿಗೆ ನಿಂತು ಅವರಿಗೆ ಕ್ಯಾಪ್ಟನ್ ಅನುಪಮಾ ಗೌಡ ಸಪೋರ್ಟ್ ಮಾಡಿದ್ದು ರೂಪೇಶ್ ರಾಜಣ್ಣಗೆ ಸರಿಬರಲಿಲ್ಲ. ಹಾಗಾಗಿ ಇಬ್ಬರ ಮಧ್ಯೆ ಮಾತಿನ ಚಕಮಕಿಯೇ ನಡೆಯಿತು. ಈ ರೀತಿಯಾದರೆ ನಾನು ಮನೆಯಲ್ಲಿ ಇರಲಾರೆ ಎಂದು ಬ್ಯಾಗ್ ಸಮೇತ ಹೊರಟು ನಿಂತರು.
ತಾನು ಮನೆಯಿಂದ ಹೊರ ಹೋಗಬೇಕು, ದಯವಿಟ್ಟು ಬಾಗಿಲು ತೆಗೆಯಿರಿ ಎಂದು ಬಿಗ್ ಬಾಸ್ ಅವರನ್ನು ಕೇಳಿಕೊಂಡರು ರೂಪೇಶ್ ರಾಜಣ್ಣ. ಕೋಪಗೊಂಡಿದ್ದ ರೂಪೇಶ್ ಅವರನ್ನು ರೂಪೇಶ್ ಶೆಟ್ಟಿ ಮತ್ತು ಸಾನ್ಯ ಸಮಾಧಾನಿಸಿದರು. ಆದರೆ, ಅನುಪಮಾ ಗೌಡ ಮಾತ್ರ ತಾವೇನೂ ತಪ್ಪು ಮಾಡಿಲ್ಲ, ಸುಖಾಸುಮ್ಮನೆ ರೂಪೇಶ್ ಕೂಗಾಡಿದ್ರು ಎಂದು ನೊಂದುಕೊಂಡಿದ್ದಾರೆ.