ಜೀವನೋಪಾಯ ವೃದ್ಧಿ ಮಾಡುವ ಜತೆಜತೆಗೆ ಉದ್ಯೋಗದ ಅವಕಾಶಗಳನ್ನು ಸೃಷ್ಟಿಸುವ ಮೂಲಕ ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಗೌರಿ&ಗಣೇಶ ಹಬ್ಬದ ಬಾಗಿನ ನೀಡಲು ಸರ್ಕಾರ ಮುಂದಾಗಿದೆ. ಸಖಿ ಪರಿಕಲ್ಪನೆಯಲ್ಲಿ ವಿವಿಧ ಉದ್ಯೋಗಾವಕಾಶ ಕಲ್ಪಿಸುವ ಮೂಲಕ ಮಹಿಳೆಯರ ಆತ್ಮವಿಶ್ವಾಸ ಹೆಚ್ಚಿಸುವ ಹೊಸ ಯೋಜನೆ ಇದಾಗಿದೆ. ಕೃಷಿ ಸಖಿ, ವನ ಸಖಿ, ಹೈನುಗಾರಿಕೆ ಸಖಿ, ಬ್ಯಾಂಕ್ ವಹಿವಾಟು ಸಖಿ, ಡಿಜಿಟಲ್ ಪಾವತಿ ಸಖಿ ರೂಪದಲ್ಲಿ ಮಹಿಳೆಯರಿಗೆ ಉದ್ಯೋಗ ತರಬೇತಿ ನೀಡಿ ಸ್ವಾವಲಂಬಿಗಳನ್ನಾಗಿ ಮಾಡಲಾಗುತ್ತಿದೆ.
ಆರೋಗ್ಯ ಇಲಾಖೆಯ ಮಾಹಿತಿಗಳನ್ನು ನೀಡಲು ಆಶಾ ಕಾರ್ಯಕರ್ತೆಯರಿದ್ದಾರೆ. ಆದರೆ ಕೃಷಿ, ಹೈನುಗಾರಿಕೆ, ವನ, ಹೀಗೆ ವಿವಿಧ ವಿಷಯಗಳಲ್ಲಿ ಮಾಹಿತಿ ನೀಡಲು ತಳಮಟ್ಟದಲ್ಲಿ ಸಿಬ್ಬಂದಿಯಿಲ್ಲ. ಬಹುತೇಕ ಇಲಾಖೆಗಳು, ಬ್ಯಾಂಕ್ಗಳು ಹೋಬಳಿ ಮಟ್ಟಕ್ಕೆ ಸ್ಥಗಿತವಾಗುವ ಮೂಲಕ ಗ್ರಾಮೀಣ ಜನರಿಂದ ದೂರ ಸರಿದಿವೆ. ಆದ್ದರಿಂದಲೇ, ಆ ಕೆಲಸವನ್ನು ಸಖಿಯರ ಮೂಲಕ ಮಾಡಲಾಗುತ್ತಿದೆ.
ಮಹಿಳಾ ಸ್ವಸಹಾಯ ಗುಂಪುಗಳಲ್ಲಿರುವ ಅಂದಾಜು 28 ಲಕ್ಷ ಜನರ ಜೀವನಮಟ್ಟ ಸುಧಾರಣೆ ಮಾಡುವ ಮಹತ್ವದ ಉದ್ದೇಶವನ್ನು ಸರ್ಕಾರ ಹೊಂದಿದೆ. ಅದರ ಭಾಗವಾಗಿಯೇ ಗ್ರಾಮೀಣ ಜೀವನೋಪಾಯ ಅಭಿಯಾನಕ್ಕೆ ಹತ್ತು ವರ್ಷಗಳಾದ ಹಿನ್ನೆಲೆಯಲ್ಲಿ ಸರ್ಕಾರ ಈ ವರ್ಷವನ್ನು ಜೀವನೋಪಾಯ ವರ್ಷವೆಂದು ಘೋಷಣೆ ಮಾಡಿ ಹಲವು ಯೋಜನೆಗಳನ್ನು ಜಾರಿ ಮಾಡುತ್ತಿದೆ.
ಸರ್ಕಾರದ ವಿವಿಧ ಇಲಾಖೆಗಳು, ಕೃಷಿ, ತೋಟಗಾರಿಕೆ, ಪಶು ಸಂಗೋಪನಾ ವಿಶ್ವವಿದ್ಯಾಲಯಗಳನ್ನು ಒಗ್ಗೂಡಿಸುವ ಮೂಲಕ ವಿವಿಧ ಯೋಜನೆಗಳನ್ನು ಗ್ರಾಮೀಣ ಮಹಿಳೆಯರ ಜೀವನೋಪಾಯ ವೃದ್ಧಿಗಾಗಿ ರೂಪಿಸಲಾಗುತ್ತಿದೆ. ಇದಕ್ಕಾಗಿ ವರ್ಷಕ್ಕೆ 1,000 ಕೋಟಿ ರೂ.ಗಳನ್ನು ಮೀಸಲಿಟ್ಟಿದೆ. ಅದರಲ್ಲಿ ಮಹಿಳಾ ಸಾಮರ್ಥ್ಯ ವೃದ್ದಿಗೆ 500 ಕೋಟಿ ರೂ.ಗಳನ್ನು ಬಳಸಿಕೊಳ್ಳಲಾಗುತ್ತಿದೆ.
ಗೌರವ ಧನ ಎಷ್ಟು?
ಪ್ರತಿ ಸಖಿಯರಿಗೆ ಆರಂಭದ ಮೂರು ವರ್ಷ ಪ್ರತಿ ತಿಂಗಳು 3,000 ರೂ. ಗಳ ಗೌರವ ಧನ ನೀಡಲಾಗುತ್ತದೆ. ಮೂರು ವರ್ಷದ ನಂತರ ಅವರು ನೀಡುವ ಸೇವೆಗೆ ಶುಲ್ಕ ಪಡೆಯಬೇಕು. ತಿಂಗಳಿಗೆ ಕನಿಷ್ಠ 5 ಸಾವಿರ ರೂ.ಗಳನ್ನು ಗಳಿಸುವಂತಾಗಬೇಕು ಎಂಬುದು ಗ್ರಾಮೀಣ ಜೀವನೋಪಾಯ ಅಭಿಯಾನದ ಉದ್ದೇಶ. ಅದೇ ರೀತಿಯಲ್ಲಿಯೇ ಯೋಜನೆ ರೂಪುಗೊಂಡಿದೆ. ತರಬೇತಿಗಾಗಿ ಒಬ್ಬರಿಗೆ ಒಂದು ದಿನಕ್ಕೆ 1020 ರೂ.ಗಳನ್ನು ವೆಚ್ಚ ಮಾಡಲಾಗುತ್ತದೆ.
ತರಬೇತಿಯ ಸ್ವರೂಪ
ಕೃಷಿ ಸಖಿಯರಿಗೆ ಕೃಷಿ ವಿವಿಗಳ ಮೂಲಕ ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ತರಬೇತಿ ನೀಡಲಾಗುತ್ತದೆ. ಪಶು ಸಖಿಗಳಿಗೆ ಇಲಾಖೆ 9 ತರಬೇತಿ ಕೇಂದ್ರಗಳು ಸೇರಿದಂತೆ ವಿವಿ ಮೂಲಕವೂ ತರಬೇತಿ ನೀಡಲಾಗುತ್ತದೆ. ಗ್ರಾಮೀಣಾಭಿವೃದ್ಧಿ ಸಂಸ್ಥೆಗಳ (ಆರ್ಸೆಟಿ) ಮೂಲಕ ಬಿ.ಸಿ. ಸಖಿ ಮತ್ತು ಡಿಜಿ ಪೇ ಸಖಿಯರಿಗೆ ಹಾಗೂ ಅರಣ್ಯ ಇಲಾಖೆಯ ಮೂಲಕ ವನ ಸಖಿಯರಿಗೆ ತರಬೇತಿ ನೀಡಲಾಗುತ್ತದೆ.
ಯಾರು, ಯಾವ ಕೆಲಸ? ಕೃಷಿ ಸಖಿ
ಕೃಷಿ, ರೇಷ್ಮೆ, ತೋಟಗಾರಿಕೆ ಇಲಾಖೆಗೆ ಸಂಬಂಧಿಸಿದಂತೆ ಗ್ರಾಮೀಣ ಜನರಿಗೆ ಮಾಹಿತಿ ನೀಡುವುದು. ಪಂಚಾಯಿತಿ ಮಟ್ಟದಲ್ಲಿ ಈ ಇಲಾಖೆಗಳಿಲ್ಲ. ಹಳ್ಳಿಗಳಿಗೆ ಅಧಿಕಾರಿಗಳು ಹೋಗುವುದಿಲ್ಲ. ಇವರಿಗೆ 60 ದಿನಗಳ ತರಬೇತಿ ನೀಡಲಾಗುತ್ತದೆ. ತಂತ್ರಜ್ಞಾನದ ಬಗ್ಗೆ, ಕೃಷಿ ವಿಮೆ ಮಾಡಿಸುವ ಬಗ್ಗೆ, ಬೆಳೆ ಹಾನಿ ಪರಿಹಾರ ಕೊಡಿಸುವ ಬಗ್ಗೆ, ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಬಗ್ಗೆ, ಮಾರುಕಟ್ಟೆಗಳ ಬಗ್ಗೆ ರೈತರಿಗೆ ಮಾಹಿತಿ ನೀಡುತ್ತಾರೆ.
ಪಶು ಸಖಿ
ಇವರಿಗೆ 42 ದಿನಗಳ ತರಬೇತಿ ನೀಡಲಾಗುತ್ತದೆ. ಜಾನುವಾರುಗಳ ಬಗ್ಗೆ ಸಮಗ್ರ ಮಾಹಿತಿ, ಹೈನುಗಾರಿಕೆ, ಕೋಳಿ ಸಾಕಣೆ, ಹೀಗೆ ವಿವಿಧ ಮಾಹಿತಿ ನೀಡುವ ಕೆಲಸ ಇವರದ್ದು.
ಏನಿದು ಯೋಜನೆ?
ಮಹಿಳಾ ಸ್ವಸಹಾಯ ಗುಂಪುಗಳಲ್ಲಿ ತಯಾರಿಸುವ ಉತ್ಪನ್ನಗಳ ಮೌಲ್ಯವರ್ಧನೆ, ಮಾರುಕಟ್ಟೆಗೆ ಸಂಬಂಧಿಸಿದಂತೆ ಮಾಹಿತಿ ನೀಡುವುದಕ್ಕೆ ತರಬೇತಿ ಪಡೆದ ಸಿಬ್ಬಂದಿ “ಸಖಿ’ಯಾಗಿರುತ್ತಾರೆ. ಪ್ರತಿ ಪಂಚಾಯಿತಿ ವ್ಯಾಪ್ತಿಯಲ್ಲಿ ಇವರನ್ನು ನೇಮಕ ಮಾಡಲಾಗುತ್ತದೆ. ಸಮುದಾಯ ಸಂಪನ್ಮೂಲ ವ್ಯಕ್ತಿಗಳ ರೀತಿಯಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ.
ವನ ಸಖಿ
ಮರ & ಮುಟ್ಟು ಹೊರತಾದ ಅರಣ್ಯ ಉತ್ಪನ್ನಗಳನ್ನು ಸಂಗ್ರಹ ಮಾಡು ವುದು, ಮೌಲ್ಯವರ್ಧನೆ ಮಾಡುವುದು, ಮಾರಾಟ ಮಾಡುವುದು, ವನಗಳನ್ನು ಅಭಿವೃದ್ಧಿ ಪಡಿಸುವ ವಿಚಾರದಲ್ಲಿ ಮೇಲ್ವಿ ಚಾರಣೆ ಮಾಡುವುದು ಇವರ ಜವಾಬ್ದಾರಿ.
ಬಿ.ಸಿ. ಸಖಿ
ಬ್ಯಾಂಕಿಂಗ್ ಕರೆಸ್ಪಾಂಡೆನ್ಸ್ (ಬಿ.ಸಿ) ಬಗ್ಗೆ ಮಾಹಿತಿ ನೀಡುವುದು ಇವರ ಉದ್ದೇಶ. ಸಾಲ, ವಿಮೆ ಮಾಡಿಸುವುದು ಮೊದಲಾದ ಮಾಹಿತಿಗಳನ್ನು ನೀಡಲಿದ್ದಾರೆ.
ಡಿಜಿ ಪೇ ಸಖಿ: ಬ್ಯಾಂಕ್ಗಳು ನೀಡುವ ಎಲ್ಲ ರೀತಿಯ ಸೇವೆಗಳು, ಪಿಂಚಣಿ ವಿತರಣೆ ಸೇರಿದಂತೆ ವಿವಿಧ ರೀತಿಯ ಪೇಮೆಂಟ್ ಆಧಾರಿತ ಸೇವೆಯನ್ನು ನೀಡಲಿದ್ದಾರೆ.
ಅನುಕೂಲಗಳೇನು?
* ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಷ್ಟಿ
* ಆರ್ಥಿಕ ಚಟುವಟಿಕೆಗಳು ಹೆಚ್ಚು
* ಗ್ರಾಮೀಣರ ಜೀವನಮಟ್ಟ ಸುಧಾರಣೆ
* ಗ್ರಾಮೀಣ ಜನರಿಗೆ ಸಕಾಲಕ್ಕೆ ಮಾಹಿತಿ
* ಮಹಿಳೆಯರ ಸಾಮರ್ಥ್ಯವೂ ವೃದ್ಧಿ